ಭಾನುವಾರ, ಮೇ 15, 2022

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಕವನ ರೂಪ

 ಇಂದು ಹುಣ್ಣಿಮೆ ಪ್ರಯುಕ್ತ ಸತ್ಯ ನಾರಾಯಣ ಕಥನ


ಶ್ರೀ ಸತ್ಯನಾರಾಯಣ ವ್ರತದಿ ಪೂಜಾಂಗವಾಗಿಹ ಕಥನ

_______________________________________________


ಶ್ರೀ ಸತ್ಯನಾರಾಯಣ ವ್ರತ ನಮ್ಮ ಜನರ ಬದುಕಿನಲ್ಲಿ ಸಾಮಾನ್ಯವಾಗಿಬಿಟ್ಟಿರುವ ಒಂದು ಪೂಜಾ ವಿಧಾನ. ಅದರ ಭಾಗವಾಗಿರುವ ಕಥೆಯ ಪಾರಾಯಣ ಮಾಡುವುದು ಒಂದು ಪ್ರಮುಖ ಪೂಜಾಂಗ. ಅದನ್ನು ಕಥಾ ರೂಪದ ಬದಲು ಕಾವ್ಯ ರೂಪದಲ್ಲಿ ಹಿಡಿಯುವ ಯತ್ನ ಮಾಡಿದ್ದೇನೆ – ಸಂಕ್ಷಿಪ್ತ ರೂಪದಲ್ಲಿ. ಪ್ರತಿ ನಿತ್ಯ ಅಥವ ತಿಂಗಳು ತಿಂಗಳೂ ಪೂಜಿಸುವಂತವರಿಗೆ ಇದು ಸಮಯದ ದೃಷ್ಟಿಯಿಂದ ಉಪಯೋಗವಾದೀತೆಂಬ ಆಶಯ.

___________________________________

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಕವನ ರೂಪದಲ್ಲಿ ಈ ಕೆಳಗಿದೆ

_________________________________


ಹಿನ್ನಲೆ

_________________________________


ಭಗವಾನ್ ಕೃಷ್ಣನ ಮಾತೆ ಹೇಳಿಹ ನುಡಿ ಭಗವದ್ಗೀತೆ

ನನ್ನವತಾರಾ ಕಾರಣ ಅರಿತವಗಿಲ್ಲ ಮರುಜನ್ಮ ಚಿಂತೆ

ಭಕ್ತ ಕೋಟಿ ಮಹಾತ್ಮರು ಮಹಿಮೆ ಲೀಲೆ ಹಾಡುವಂತೆ

ಶ್ರದ್ದೆ ಭಕ್ತಿಯಲಿ ವ್ರತಮಾಡೆ, ಮುಕ್ತಿ ಗಳಿಸುತೆ ನಿಶ್ಚಿಂತೆ || ೦೦ ||


ಶ್ರೀ ಸತ್ಯನಾರಾಯಣ ವ್ರತದಿ ಪೂಜಾಂಗವಾಗಿಹ ಕಥನ

ಕೇಳದಿರೆ ನಷ್ಟ, ಕೇಳೆ ಭಗವನ್ನಾಮಸ್ಮರಣೆಯೆ ಅನುದಿನ

ಮಹಾತ್ಮರಂತೆ ಮುಕ್ತಿ ಮಾರ್ಗಕೆ, ನಡೆಯೇ ದಿವ್ಯ ಪಥದೆ

ಮಾಡೆ ಸಾಕು ನೇಮ ನಿಷ್ಠೆಯಲಿ, ಸರ್ವ ಸಂಪದ ತಪ್ಪದೆ || ೦೦ ||


__________________________________

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೧

__________________________________


ಶ್ರೀ ಸತ್ಯನಾರಾಯಣ ಕಥೆಯಿಹ ರೇವಾ ಕಾಂಡ

ಸೂತಪುರಾಣಿಕ ವಿರಚಿತ ಸ್ಕಂದಪುರಾಣದಿಂದ

ನೈಮಿಶಾರಣ್ಯದಿ ಶೌನಕರ ಸಹಸ್ರ ವರ್ಷ ಯಜ್ಞ

ಜತೆ ಋಷಿಗಳಿಗ್ಹೇಳಿ ಪುಣ್ಯಕಥೆ ಲೋಕ ಕಲ್ಯಾಣಾ || ೦೧ ||


ಸಂಸಾರದಿಹಜಗದ ಚಿಂತೆ ತೊರೆದವರಾ ಬಳಗ

ಶೌನಕಾದಿಮುನಿ ಕೇಳೆ ಸೂತ ಪುರಾಣೀಕರನಾಗ

‘ಕಾಮನೆ ಬಯಕೆ ಮನುಕುಲ ಸಹಜವೀ ಪ್ರವೃತ್ತಿ

ಯಾವ ಪೂಜೆ,ವ್ರತ,ತಪ ಕೊಡಬಲ್ಲವು ಸರಿಮುಕ್ತಿ ?’ || ೦೨ ||


ಸಂತಸದೀ ಋಷಿವರ, ಮನುಕುಲದೇಳಿಗೆ ವಿಚಾರ

ಸಂಸಾರಾ ತ್ಯಜಿತರ ನಿಸ್ವಾರ್ಥ ಪ್ರಶ್ನೆ ಜನ ಹಿತಕರ

ದೇವರ್ಷಿ ನಾರದ ನಾರಾಯಣನಿಗೆ ಕೇಳಿದ ಮಾತೆ

ನಾ ಪೇಳುವೆ ನಿಮಗೆ ಕೇಳಿ ಪುನೀತರಾಗಿರಿ ಚರಿತೆ || ೦೩ ||


ತ್ರಿಲೋಕ ಸಂಚಾರಿ ಭೂಲೋಕ ಸುತ್ತಾಟದಿ ಖೇದ

ಮನುಜ ನರಳಿ ಅಜ್ಞಾನ ಜನ್ಮಾಂತರ ಕರ್ಮ ಬಂಧ

ಕೊನೆಯಿರದಾ ದುಃಖ ಪರಿಹಾರ ದಾರಿಯನ್ಹುಡುಕೆ

ಸರ ಸರನೆ ವೈಕುಂಠಕೆ ಶ್ರೀಹರಿಗಿಡುತಲಾ ತೊಡಕೆ || ೦೪ ||


ವೈಕುಂಠದೀ ಶೇಷತಲ್ಪಾಸೀನ ನಾರಾಯಣ ವದನ

ನೋಡುತಲೆ ಮರೆತೆಲ್ಲ ನಾರದ ಮಾಡೇ ಗುಣಗಾನ

ನಸುಸಕ್ಕ ಶ್ರೀಹರಿ, ವಿಷಯವಿತ್ತೆ ತ್ರಿಲೋಕಸಂಚಾರಿ ?

ಮಮ್ಮಲ ಮರುಗೀ ಮನ, ಭೂಜನಕಿಲ್ಲವೆ ರಹದಾರಿ ? || ೦೫ ||


ಆಜನ್ಮ ಬ್ರಹ್ಮಚಾರಿ ಯಾಕಿಲ್ಲ ಪರಿಹಾರಕಿದೆ ದಾರಿ

ಕರ್ಮಕಾಂಡಾವೃತ್ತ ಹುಲುಮಾನವನರಿಯದ ಪರಿ

ಆದರೂ ನಿನ ಮಾತು ಸತ್ಯ, ಲೋಕಕಲ್ಯಾಣಕೆ ನಿತ್ಯ

ಈ ಪೂಜಾರಹಸ್ಯವನರಿಸುವೆ ತೀರಲಿ ಆಸಕ್ತರಗತ್ಯ || ೦೬ ||


ಭೂಲೋಕ ವಾಸಿಗಳಿಗೆ ಶ್ರೀ ಸತ್ಯನಾರಾಯಣ ವ್ರತ

ವರ್ಣಾತೀತ ಉಚ್ಛ ನೀಚ ಭೇಧವಿಲ್ಲದೆ ಸರ್ವ-ಜನತ

ತಾವಾಗುತಾ ಭಕ್ತ-ಪುರೋಹಿತ ನೇರ ಸಂವಹಿಸುತ

ಶ್ರೀಮನ್ನಾರಾಯಣ ಕರುಣೆ ಐಹಿಕಸುಖ ಮೋಕ್ಷದತ್ತ || ೦೭ ||


ಹೇಳಯ್ಯ ಶ್ರೀಹರಿ, ವ್ರತ ನಿಯಮ ಪೂಜಾ ವಿಧಾನ

ಅರಿಯಲಿ ಭಕುತಜನ ಮಾಡಬೇಕೇನೇನು ಪ್ರಧಾನ

ನೇರ ಸರಳ ನಾರದ, ಯಾವ ಸಂಜೆಯಾದರು ಸಿದ್ದ

ಕೆಳೆ ಬಂಧು ಭಾಂದವರೊಡನಿರೆ, ನಂಬಿಕೆ ಭಕ್ತಿ ಶುದ್ಧ || ೦೮ ||


ಮಾಡೆ ಸಾಕು ಪ್ರಸಾದ, ಹಾಲು ಬಾಳೆ ಸಕ್ಕರೆ ತುಪ್ಪ

ಸಮ ಪ್ರಮಾಣದಲಿ ಕಾಯಿಸುತ, ಬೆರೆಸಿದ ಸಮರ್ಪ

ಹಾಡಿ ಹೊಗಳುತ ಭಕ್ತಿಭಜನೆಯಾ ಸುಶ್ರಾವ್ಯದಿರುಳು

ಕಥೆ ಕೇಳಿ ಹಂಚಿ ಪ್ರಸಾದ ಗೌರವದಲಿ ಬೀಳ್ಕೊಡಲು || ೦೯ ||


ಸ್ಥಿತಿ ನಿಯಾಮಕನಿತ್ತ ಪೂಜಾಕ್ರಮ ನಾರದ ಸಂಪ್ರೀತ

ಸರಳ ವ್ರತವದರಲ್ಲಿ ಗಮನ, ಭಕ್ತಿ ಭಜನೆ ಕಥೆಗಳತ್ತ

ಆಲಿಸಲು ಬಯಸಿದ ಯೋಗಿಯಾಸೆಗೆ ನಾರಾಯಣ

ಭಾಗ ವಿಶೇಷಗಳಾಗಿ ಬಿತ್ತರಿಸಿದ ಖಂಡದಲಿಹ ಕಥನ || ೧೦ ||


(ಮುಕ್ತಾಯ : ಅಧ್ಯಾಯ ೦೧)


ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ


________________________________________

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೨

________________________________________


ಕೇಳಯ್ಯ ನಾರದ, ವೃದ್ಧ ಕಾಶಿ ಬಡ ಬ್ರಾಹ್ಮಣನ ಕಥೆ

ಸಕಲ ಸದ್ಗುಣ ಸಂಪನ್ನ ಐಶ್ವರ್ಯಹೀನ ಭಿಕ್ಷೆಯೆ ಸ್ವತ್ತೆ

ವಿಪ್ರೋತ್ತಮನ ಪರೀಕ್ಷೆಗೆ ವಿಪ್ರಪ್ರಿಯನಾ ಮಾರುವೇಷ

ಭಕ್ತಿ ಪಥದಲಿಹರೆಲ್ಲ ವಿಪ್ರರೆ, ಹರಿಯಾ ಕರುಣಾಪಾಶ || ೧೧ ||


ಬ್ರಾಹ್ಮಣ ವೇಷದಿ ವಿಪ್ರೋತ್ತಮನ ಬಳಿ ಬಂದಾ ದೇವ

ಗೆಳೆಯ ಹೇಳಯ್ಯಾ, ನಿನದೇನಿದೇ ಪರಿತಾಪ ನೋವ

ಕಡುಬಡವ ವಯಸಾಗಿದೆ, ಕಾಡುವ ಬಡತನ ಬವಣೆ

ಬಿಟ್ಟು ಹೋಗದೀ ಶಾಪವ ತೊಲಗಿಸುವ ಹಾದಿ ಕಾಣೆ || ೧೨ ||


ನಕ್ಕ ಪರಮಾತ್ಮ, ಶ್ರೀ ಸತ್ಯನಾರಾಯಣ ವ್ರತವಿಹುದು

ಮಾಡಿ ನೋಡೊಮ್ಮೆ ನಿನ್ನ, ಸಂಕಷ್ಟಗಳೆಲ್ಲಾ ಹರಿವುದು

ಎಂದುಸುರಿದ ಭಗವಂತ ವ್ರತ ಕ್ರಮ ನಿಯಮಾ ಸೂಕ್ತ

ಇರುಳಿನ ನಿದ್ರೆ ಕನಸಲೂ, ಆ ಚಿಂತೆಯಲೆ ಮಲಗುತ || ೧೩ ||


ಬಾರದ ನಿದ್ರೆಯಲುರುಳಾಡುತ ವಿಪ್ರೋತ್ತಮ ನುಡಿದ

ನಾಳಿನ ಭಿಕ್ಷಾಟನೆ ಗಳಿಸಿದ್ದೆಲ್ಲದಿ ವ್ರತ ನಡೆಸಲು ಸಿದ್ದ

ಲೌಕಿಕದೈಶ್ವರ್ಯಕೊಲಿಯದ ದೇವ, ಭಾವಕೆ ಸಂತೃಪ್ತ

ಭಿಕ್ಷೆಯಲೆ ಮಳೆ ಸುರಿಸಿದ, ವ್ರತಕಿಲ್ಲದ ಹಣದಾ ಕುತ್ತ || ೧೪ ||


ಕೊಂಡು ತಂದ ವ್ರತ ದ್ರವ್ಯ, ಸಾಂಗೋಪದ ಪೂಜೆ ಭವ್ಯ

ನೋಡು ನೋಡುತೇ ಭಲಾ, ಬಡತನ ದಾರಿದ್ರ ಮಾಯ

ಸಂತಸಕೆಣೆಯೆಲ್ಲಿ ಭಾಗ್ಯಕೆ, ಪ್ರತಿ ತಿಂಗಳು ಮಾಡಿ ವ್ರತ

ಪರಮಸುಖ ಸಂತಸ ಜತೆಗೆ, ಮೋಕ್ಷ ಪಡೆದೆ ಸುಖಾಂತ || ೧೫ ||


ಆಲಿಸುತ ಧ್ಯಾನನಿರತ ಶೌನಕಾದಿ ಮುನಿಗಣ ಪುನೀತ

ಕೇಳಲು ಸೂತಪುರಾಣಿಕರ, ಜಗದಿ ಪಸರಿಸಿತ್ಹೇಗೀವ್ರತ

ಪರಿಪಾಲಿಸಿದವರಿಗೆಲ್ಲಾ, ಸಿಕ್ಕಿತೇನೇನು ಭಾಗ್ಯ ಸುಕೃತ

ಸೂತರಿತ್ತರು ವಿವರ, ವಿಪ್ರನಾ ಕಥೆಯಲೆ ಉತ್ತರಿಸುತ್ತ || ೧೬ ||


ವ್ರತನಿರತ ಬ್ರಾಹ್ಮಣ ಗೃಹಕದೊಂದು ದಿನ ಕಟ್ಟಿಗೆಯವ

ಪೂಜಾ ವೈಭವ ಸಂಭ್ರಮಕೆ, ಚಕಿತನಾಗಿ ಕೇಳಿದ ಜಾವ

ಏನೀ ಪೂಜಾ ವ್ರತ ಸ್ವಾಮಿ, ಯಾವುದೀ ಹಣ್ಣೂ ಹಂಫಲ ?

ಮಾಡಿಹೇ ಸತ್ಯನಾರಾಯಣ ವ್ರತ, ಫಲಿತವೀ ಸಂಪತ್ತೆಲ್ಲ || ೧೭ ||


ಯಾರೂ ಮಾಡಬಹುದಾದ ಪೂಜೆ, ಸರಳ ದೈವಿಕ ಶ್ರದ್ಧೆ

ಮನದಾಶೆ ಕಾಮನೆಯೆಲ್ಲ, ಪೂರೈಸೆ ಭಗವಂತನ ಮದ್ದೆ

ನನ್ನ ಬಡತನವೆಲ್ಲ ಮಾಯ, ಲಭಿಸಿ ವ್ರತದಿಂದಾದಾಯ

ಸೇವಿಸು ನೀ ಪ್ರಸಾದ, ಫಲ ಸಿಗಲಿ ನಿನಗು ಪುಣ್ಯಕಾರ್ಯ || ೧೮ ||


ಮರ ಕಡಿವಾ ಮನದೊಳಗೆ, ಕಡಿಯುತ ಚಿಂತನೆಗೆ ಸೌದೆ

ನಾಳಿನ ಸಂಪಾದನೆಯಲ್ಲೆ ನಾ ಮಾಡಿಬಿಡುವೆ ವ್ರತ ಶ್ರದ್ದೆ

ಎಂದವನಾ ಕಟ್ಟಿಗೆ ವ್ಯಾಪಾರವಂದಾಯ್ತು ಭರ ಪೂರದಲಿ

ವ್ರತಪೂಜಾ ಸಲಕರಣೆಯೆಲ್ಲ, ತರಲು ಬಂದ ಲಾಭದಲಿ || ೧೯ ||


ಬಂಧು-ಬಳಗ ನೆಂಟರಿಷ್ಟರೆಲ್ಲರ, ಆಹ್ವಾನಿಸಿ ಪೂಜಾವ್ರತ

ಪೂಜಿಸೆ ಸಾಧಾರಣ ಸೌದೆ ಕಡಿವವಗು, ತಾ ಒಲಿಯುತ

ಕರುಣಿಸಿದನು ಐಶ್ವರ್ಯ, ಸಂಪತ್ಭೋಗದ ಸಿರಿ ಸುರಿಮಳೆ

ಭಕ್ತಿ ವ್ರತನಿರತನಿಗನುಗ್ರಹಿಸಿ,ಸತ್ಯ ಲೋಕಕೊಯ್ದ ಕಹಳೆ || ೨೦ ||


(ಮುಕ್ತಾಯ : ಅಧ್ಯಾಯ ೦೨)


ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ


___________________________________

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೩

___________________________________


ಮುಂದುವರೆಸುತ ಸೂತರು ರಾಜನ ಕಥೆ ಉಲ್ಕಮುಖ

ಸತ್ಯವ್ರತ ಪ್ರಜ್ಞಾವಂತ ದಯಾಳು ದೀನದಲಿತ ಸೇವಕ

ಅಸೀಮ ಭಕ್ತ ದಿನಂಪ್ರತಿ ಗುಡಿ ಗೋಪುರ ದೇವಾಲಯ

ಭಗವಂತನಾರಾಧನೆಗೆ ಬಡವಗೆ ದಾನ ಧರ್ಮ ಕಾರ್ಯ || ೨೧ ||


ಅಂತೊಂದು ದಿನ ನದಿ ತೀರದಿ ಸತ್ಯನಾರಾಯಣವ್ರತ

ಮಾಡಿರುವ ಹೊತ್ತಲೆ ಬರಲೊಬ್ಬ ವರ್ತಕ ಶ್ರೇಷ್ಠ ಚಕಿತ

ಕೇಳಲೇನಿದು ಪೂಜಾವ್ರತ, ಏನಿಹುದದು ಪೂಜಾಫಲ

ವಿನಮ್ರದಲೆ ಪೇಳಲು ರಾಜ, ವ್ರತ ನಿಯಮದ ಸರಳ || ೨೨ ||


ನಾ ನಡೆಸಿಹನಯ್ಯಾ ಈ ವ್ರತ ಸಿರಿ ಸಂಪದ ಭಾಗ್ಯಕೆ

ನಿನ್ನ ಹಡಗಂತೆ ಸಮೃದ್ಧ ರಾಜ್ಯವಾಗಿರಲೆಂಬ ಬಯಕೆ

ಶ್ರಿಮನ್ನಾರಾಯಣನಾ ವಿಷ್ಣುವನು ಓಲೈಸುವ ವಿಧಾನ

ಬಯಸಿದ್ದೆಲವ ಒಲಿದರೆ, ಕರುಣಿಸಿ ಮಾಡೇ ಪ್ರಧಾನ || ೨೩ ||


ವರ್ತಕ ಶ್ರೇಷ್ಠಿ ಕುತೂಹಲ, ಕೇಳಲೆ ಪೂಜಾ ವಿಧಾನ

ಸಿರಿಸಂಪದವಿದ್ದೇನು ಫಲ, ಮಕ್ಕಳಿಲ್ಲದೆ ಕೊರಗಿಹನ

ದಯಮಾಡಿ ತಿಳಿಸಯ್ಯಾ ರಾಜ, ಬೇಕಾದ್ದೆಲ್ಲಾ ವಿವರ

ರಾಜನಿತ್ತ ಹರ್ಷದಲೆ, ಪಡೆದು ವರ್ತಕ ಸೇರಿದನೂರ || ೨೪ ||


ಮನೆಯೊಡತಿ ಲೀಲಾವತಿಗ್ಹೇಳುತ ವ್ರತಪೂಜಾಸಾರ

ಮಕ್ಕಳಾಗಲಿ ಮಾಡುವ ಸತ್ಯನಾರಾಯಣವ್ರತ ಪೂರ

ಅನತಿ ಕಾಲದೆ ಗರ್ಭಿಣಿ ಲೀಲಾವತಿ ಹೆತ್ತು ಕಲಾವತಿ

ಪ್ರಾಯಕೆ ಬಂದರೂ ಪೂಜೆಯ ಮರೆತು ಬಿಟ್ಟ ಸಂಗತಿ || ೨೫ ||


ಚಿಂತೇ ಬಿಡು ಲೀಲಾವತಿ, ವ್ರತ ಮಾಡಿ ಮದುವೆ ಜತೆ

ತೀರಿಸಿ ಬಿಡುವ ಹರಕೇ ಬಾಕಿ, ಎಂದವನಾ ಕಕ್ಕುಲತೆ

ಮದುವೆ ನಡೆದೇ ಹೋಯ್ತೆ, ವ್ರತವೇಕೊ ಮರೆತೋಯ್ತೆ

ಭಕ್ತಪ್ರಿಯ ನಾರಾಯಣನೆ, ನೆನಪಿಸಲು ಬರಬೇಕಾಯ್ತೆ || ೨೬ ||


ರತ್ನಸಾರ ಪಟ್ಟಣದಲಿ ರಾಜ್ಯವನಾಳುತ ಚಂದ್ರಕೇತು

ಅಳಿಯನ ಜತೆ ವರ್ತಕ ವ್ಯಾಪಾರಕೆ ಬಂದಿಳಿದಹೊತ್ತು

ಅರಮನೆಯಲಿ ಕದ್ದ ದ್ರವ್ಯ ಹೊತ್ತೋಡಿದ ಕಳ್ಳರ ಬೆನ್ನು

ಹಿಡಿದೋಡಿದ ರಾಜಭಟರ ತಪ್ಪಿಸಿಕೊಳ್ಳಲೆಸೆದ ಹೊನ್ನು || ೨೭ ||


ಮರದ ನೆರಳಡಿ ವಿಶ್ರಮಿಸಿರೆ ವರ್ತಕನೊಡನೆ ಅಳಿಯ

ಬಿತ್ತಲ್ಲ ಕದ್ದೆಸೆದ ಗಂಟು, ಪಕ್ಕದಲೆ ಗ್ರಹಚಾರ ಸಮಯ

ಪರದೇಶಿಗಳ ಕಥೆ ಪ್ರವರ, ಕೇಳುವವರಲ್ಲ ರಾಜಭಟರು

ಕದ್ದ ಮಾಲಿನ ಜತೆಗೆ, ಹೊತ್ತೊಯ್ದು ಸೆರೆಗ್ಹಾಕಿ ಮರೆತರು || ೨೮ ||


ನೆನಸಿಕೊಂಡ ವ್ಯಾಪಾರಿ, ವ್ರತ ಮರೆತೆ ಕಾಡಿಹ ಶ್ರೀಹರಿ

ಕಳ್ಳತನದಿ ಬೀದಿಪಾಲು, ಲೀಲಾವತಿ ಕಲಾವತಿ ಕಮರಿ

ಭಿಕ್ಷೆಯಲಲೆಯುತ ಕಲಾವತಿ ಕಂಡು ನಾರಾಯಣ ವ್ರತ

ತಾಯಿಗ್ಹೇಳಲೆ ವೃತ್ತಾಂತ ಮರೆತಿದ್ದ ವ್ರತದ ನೆನಪಾಯ್ತ || ೨೯ ||


ಮರುದಿನವೆ ಕರೆಯುತ ಬಂಧು ಬಳಗದ ಜತೆಯೆ ವ್ರತ

ಗಲ್ಲ ಬಡಿಯುತ ಕ್ಷಮೆ ಕೇಳುತೆ, ರಾಜನಿಗೆ ಕನಸು ಬಿತ್ತ

ತಪ್ಪರಿವಾಗಿ ವಿಚಾರಿಸೆ, ವರ್ತಕನ ಬಿಡುಗಡೆಗೊಳಿಸುತೆ

ತಪ್ಪಿನ ಬದಲಿಗಪಾರ, ಸಂಪತ್ತ ಹೊರೆ ಹೊರಿಸಿ ಘನತೆ || ೩೦ ||


(ಮುಕ್ತಾಯ : ಅಧ್ಯಾಯ ೦೩)


ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ


________________________________________

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೪

________________________________________


ಮುಂದೇನಾಯ್ತೆನಲೆ ಮುನಿಜನ, ಸೂತರೇಳುತ ಕಥನ

ಬಿಡುಗಡೆಯಾದ ಸಂತಸ, ಹಡಗನೇರಿದರಿಬ್ಬರೆ ಜತನ

ಊರ ಬಾಗಿಲಿನ್ಹೊರಗೆ, ಬಂದು ತಲುಪಿದವರ ಪರೀಕ್ಷೆಗೆ

ಬಂದನೆ ಸನ್ಯಾಸಿ ರೂಪದೆ, ಏನಿದೆ ಕೇಳಲ್ಹಡಗಿನೊಳಗೆ || ೩೧ ||


ಬಿಟ್ಟರೂ ಬಿಡದ ಮಾಯೆ, ವರ್ತಕನನು ಬಿಡದ ನೋವೆ

ಅನೃತವನಾಡಿಸಿತು ನಾಲಿಗೆ, ತರಗೆಲೆ ತುಂಬಿದ ನಾವೆ

ನಸುನಕ್ಕ ಭಗವಂತ, ತಥಾಸ್ತು ಎನುತ ನಡೆದ ಸಮಯ

ಎದೆಯೊಡೆದೆ ಪ್ರಜ್ಞಾಶೂನ್ಯ, ವರ್ತಕನಿಗರಿವಾಗಿ ನ್ಯಾಯ || ೩೨ ||


ಓಡಿದ ನಾಗಾಲೋಟ ಸನ್ಯಾಸಿಯ ಊರೆಲ್ಲ ಹುಡುಕುತ

ಕಾಲಿಗೆ ಬಿದ್ದವನೆ, ಕ್ಷಮಿಸಯ್ಯಾ ನನ್ನ ಮೂಢತನ ಧೂರ್ತ

ಕರುಣಾಮಯ ಶ್ರೀಹರಿ, ಕ್ಷಮಿಸಿದನು ಕನಿಕರವಾ ತೋರಿ

ನಿರಾಳದೆ ಮರಳಿದ ವರ್ತಕ, ಸತಿಗೆ ಕಳಿಸೆ ಸುದ್ದಿಸವಾರಿ || ೩೩ |


ಶ್ರೀಸತ್ಯನಾರಾಯಣವ್ರತ ನಿರತೆ, ಕಾಯದ ಸಹನೆ ಕುತ್ತೆ

ಪೂಜೆ ಮುಗಿಸಲು ಕಲಾವತಿಗ್ಹೇಳಿ, ಓಡುತ ಪತಿಗರಸುತೆ

ಗಂಡನನು ಕಾಣುವ ತವಕ, ಅವಸರದಲಿ ಮುಗಿಸಿ ಪೂಜೆ

ಸ್ವೀಕರಿಸದೆ ಪೂಜಾ ಪ್ರಸಾದ, ಓಡಿದಳೆ ಕಲಾವತಿ ಸಹಜೆ || ೩೪ ||


ಬಂದು ನೋಡಿದರಲ್ಲಿ, ಕಾಣದ ನಾವೆ ಪತಿಯ ಸುಳಿವೆಲ್ಲಿ

ಹಾಕಿದ ಲಂಗರೆ ನಾಪತ್ತೆ ಮುಳುಗಿತ್ತೆ ಪತಿಯ ಜತೆಯಲ್ಲಿ

ಬಿಕ್ಕಿ ಆತ್ಮಾಹುತಿಗೆಣೆ ಕಲಾವತಿ, ವರ್ತಕ ಚಿಂತಿತ ಪೂರ್ತಿ

ನಡೆದಿರಬೇಕೇನೊ ತಪ್ಪು, ಮನ ಹುಡುಕಿರೆ ಕಾರಣ ಸರತಿ || ೩೫ ||


ಚಿಂತೆಯ ನಡುವಲೆ ಅಲ್ಲೆ, ವ್ರತ ಮಾಡಲ್ಹೊರಟಾ ವರ್ತಕ

ಅರಿತೊ ಅರಿಯದೆ ಮಾಡಿದ, ತಪ್ಪೆಲ್ಲ ಕ್ಷಮಿಸು ಪ್ರವರ್ತಕ

ವಿಧ ವಿಧದಲಿ ಪ್ರಾರ್ಥನೆ, ಮೊರೆಯಿಡುತಾ ಆರಾಧಿಸಲು

ಭಗವಂತನ ಕರುಣೆಗೆ ಮತ್ತೆ, ಅರಿವಾಯ್ತು ತಪ್ಪಿನ ತಿರುಳು || ೩೬ ||


ಸ್ವೀಕರಿಸಲಿ ಪ್ರಸಾದ ಮೊದಲು, ಪರಿಹಾರವಾಗಿ ದೋಷ

ಸರಿಯಾಗುವುದೆಲ್ಲ ಮತ್ತೆ, ನಾರಾಯಣನೆನಲು ಸುಹರ್ಷ

ವ್ರತ ಪೂಜಾಗೃಹಕೆ ಓಡಿದಳೆ, ಕಲಾವತಿ ಭರದಿ ಪ್ರಸಾದ

ಸ್ವೀಕರಿಸುತ ಪೊಡಮಟ್ಟಲು, ಶ್ರೀಹರಿ ಪರಿಹರಿಸಿ ವಿಷಾದ || ೩೭ ||


ನಿಜ ಭಕ್ತಿಯಲಿ ಎರಗಿ ಸುಕೋಮಲೆ, ಶ್ರೀಹರಿ ಕೃಪೆಮಾಲೆ

ಕಳುವಾದ ಪತಿಯು ಹಿಂದಿರುಗಿರಲೆ, ನಾರಾಯಣ ಲೀಲೆ

ಸಂತಸ ಭರದಲಿ ವೃದ್ಧಿ, ಭಗವಂತನ ಮೇಲಣ ಭಯಭಕ್ತಿ

ಸುಖಸಂತೋಷವ ಹೊಂದೆ, ಜೀವನವಿಡಿ ವ್ರತಮಾಡಿ ಶಕ್ತಿ || ೩೮ ||


ಆಂತು ಮಂಗಳಕರವಾಗೆ, ಲೀಲಾವತಿ ಕಲಾವತಿ ಪ್ರವರ

ಅಲಕ್ಷಿಸದೆ ಮಾಡೆ ಶ್ರೀಸತ್ಯನಾರಾಯಣ ವ್ರತ ಪರಿಹಾರ

ಕಷ್ಟ ನಷ್ಟಗಳೆಲ್ಲಾ ಕರಗಿ, ಸುಖಸಂತೋಷ ಸಮೃದ್ಧಿಯಲೆ

ಪಡೆಯಲು ಕೈವಲ್ಯ ಮುಕ್ತಿ, ಐಹಿಕ ಜೀವನ ಕಳೆದಮೇಲೆ || ೩೯ ||


(ಮುಕ್ತಾಯ: ಅಧ್ಯಾಯ – ೦೪)


ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ


________________________________________

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೫

________________________________________


ನೇಮಿಷಾರಣ್ಯ ಕಾನನದಿ ಸೂತರು ಮುಂದುವರೆಸುತಲಿ

ಶೌನಕಾದಿ ಮುನಿಗಳಿಗೆ ಅರುಹೆ, ಐದನೆ ಅಧ್ಯಾಯದಲಿ

ಬಲು ಮುಖ್ಯವೀ ಭಾಗದ ಕಥೆ, ನಾವಾಗಬಾರದು ಅಂತೆ

ಕೇಳಿ ಧನ್ಯರಾಗುವ ಸರದಿ, ಶ್ರೀಮನ್ನಾರಾಯಣ ಭಕ್ತಿ ಕಥೆ || ೪೦ ||


ಪೂರ್ವದಲಿ ರಾಜ್ಯವಾಳುತ, ಅಂಗಧ್ವಜನೆಂಬೊಬ್ಬ ರಾಜ

ಸರ್ವೋತ್ತಮ, ಸತ್ಯ ನಿಷ್ಠುರ ಪರಿಪಾಲಿಸುತಿರಲೆ ಸಹಜ

ಯಾರನು ಬಿಟ್ಟೀತೊ ಮಾಯೆ, ಸತ್ಯನಾರಾಯಣ ವ್ರತದ

ಅಲಕ್ಷಿಸಲೊಮ್ಮೆ ಪ್ರಸಾದ, ಸಂಕಷ್ಟಗಳ ಬಾಗಿಲಾ ತೆರೆದ || ೪೧ ||


ಬೇಟೆಯಾಡುತ ಕಾಡಿನಲಿ, ವನ್ಯಮೃಗಗಳ ಬೆನ್ನಟ್ಟುತಲಿ

ದಣಿದ ರಾಜ ವಿಶ್ರಮಿಸೆ, ಕೂಡೆ ಮರದ ನೆರಳೊಂದರಲಿ

ಅನತಿ ದೂರದಲೆ ಆಡಿಕೊಂಡಿದ್ದ ಬಾಲರ ಕಲರವದಲಿ

ಆಡಿದ್ದರಾಟ ಸತ್ಯನಾರಾಯಣ ಪೂಜೆ ಮಾಡೆ ಆಟದಲಿ || ೪೨ ||


ತುಂಡು ರೊಟ್ಟಿ ಹೊರತು, ಬೇರೇನಿಲ್ಲ ಕಿರಿಯರ ಬಳಗ

ಆರಿಸಿಕೊಂಡರು ತಮ್ಮಲೊಬ್ಬನಿಗಿತ್ತೆ ಪುರೋಹಿತ ಜಾಗ

ದನ ಕಾಯುವವರ ಬುತ್ತಿ, ಆಟದಲೆ ಸಹಜ ಬಾಲಭಕ್ತಿ

ತೋಚಿದಂತೆ ಮಾಡಿರಲು ಪೂಜೆ, ಸತ್ಯನಾರಾಯಣಶಕ್ತಿ || ೪೩ ||


ಅಟದ ಪೂಜೆಯಲಿ ನೈವೇದ್ಯ, ಬುತ್ತಿಯನೆ ಅರ್ಪಿಸಿದ

ದನಗಾಹಿ ಬಾಲರು ರಾಜನಿಗರ್ಪಿಸಲು ವ್ರತ ಪ್ರಸಾದ

ಹಮ್ಮು, ಬಿಗುಮಾನ, ಗರ್ವ ಕಾಡಿರಲು ಮಲಿನಾ ಮನ

ಮುಟ್ಟದೆ ನಡೆದನೆ ಪ್ರಸಾದ, ಆಗದಿಹುದೇ ಪ್ರತಿಫಲನ ?|| ೪೪ ||


ನೋಡು ನೋಡುತೆ ಅಂಗಧ್ವಜ, ಕಳುವಾಗಿ ಹೋಯ್ತೆಲ್ಲ

ಕಳೆದುಕೊಂಡ ಐಶ್ವರ್ಯದ ಜತೆಗೆ, ನೂರು ಮಕ್ಕಳಿನ್ನಿಲ್ಲ

ಆಲೋಚಿಸುತ ಸಜ್ಜನ ರಾಜ, ಅರಿತ ಪ್ರಸಾದದ ಶಾಪ

ನಿರ್ಲಕ್ಷಿಸಿದ ಪಾಪವೆ, ಕಾಡಿದೆ ಈ ತರದಲಿ ನಿಜರೂಪ || ೪೫ ||


ತಡಮಾಡದೆ ಅಂಗಧ್ವಜ, ಹೊರಟ ದನಗಾಹಿ ತಾಣಕೆ

ಸೇರಿಸಲದೆ ಬಾಲರ, ಮಾಡಿ ವ್ರತ ಶ್ರದ್ದಾ ಭಕ್ತಿ ಬೆಳಕೆ

ಮನ್ನಿಸಿದ ಶ್ರೀಹರಿ, ಮತ್ತೆ ಕರುಣಿಸುತ ಕಳೆದ ಸಂಪತ್ತು

ಇನ್ನಿಲ್ಲವಾದ ಬಂಧುಗಳೆಲ್ಲಾ ಮತ್ತೆ ಕೈ ಸೇರಿದ ಹೊತ್ತು || ೪೬ ||


ಸೂತರೆಂದರು ಕಥೆ ಮುಗಿಸುತ, ಕಲಿಯುಗಕಿದು ಸೂಕ್ತ

ವಿಶೇಷ ಶಕ್ತಿಯಿಹ ಈ ವ್ರತ, ಕರುಣಿಸಬಲ್ಲ ಅಪರಿಮಿತ

ಪವಿತ್ರ ಪುನೀತ ದೇವರ ದೇವನ, ಹೆಸರಾಗಿಹ ಅನಂತ

ಈಶ್ವರ, ಸತ್ಯದೇವ, ನಾರಾಯಣಾದಿ ರೂಪದ ಅದ್ವೈತ || ೪೭ ||


ಅವತರಿಸಿಹ ಹಲವವತಾರ, ಬಗೆ ರೂಪಗಳಲಿ ಒಬ್ಬನೆ

ಈ ಕಥೆ ಕೇಳಿ ಓದಿದೆಲ್ಲರಿಗು, ಸನ್ಮಂಗಳವ ತೋರುವನೆ

ಪರಿಹರಿಸುವನವರೆಲ್ಲರ ದುಃಖ ಸಂಕಷ್ಟಗಳ ಸರಮಾಲೆ

ಶ್ರೀ ಸತ್ಯನಾರಾಯಣ ವ್ರತದೆ, ಇಹಪರ ಸುಖ ಮುಟ್ಟಲೆ || ೪೮ ||


(ಮುಕ್ತಾಯ: ಅಧ್ಯಾಯ – ೦೫)


ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

___________________

ಕಾವ್ಯರೂಪ : ನಾಗೇಶ ಮೈಸೂರು


▬▬▬ஜ۩۞۩ஜ▬▬▬*▬▬▬ஜ۩۞۩ஜ▬▬

    ಧಮೋ೯ ರಕ್ಷತಿ ರಕ್ಷಿತ:*  ಕೃಷ್ಣಾರ್ಪಣಮಸ್ತು

         ಸರ್ವಜನಾಃ ಸುಖಿನೋಭವತು 

▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬